ಬೆಂಗಳೂರು, ಅಕ್ಟೋಬರ್ 23: ನಗರದಲ್ಲಿ ಒಂದು ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವ ಭಟ್ಕಳ ಮುಸ್ಲಿಂ ಜಮಾತ್ ತನ್ನ ಸದಸ್ಯರಿಗಾಗಿ ಈದ್ ಮಿಲನ್ ಕಾರ್ಯಕ್ರಮವನ್ನು ನಗರದ ಸಫೀನಾ ಗಾರ್ಡನ್ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಬೆಂಗಳೂರಿನಲ್ಲಿ ವಾಸವಾಗಿರುವ ಭಟ್ಕಳಮೂಲದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಉಮೈಸ್ ಕಾಝಿಯವರ ಪವಿತ್ರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೊಹಮ್ಮದ್ ಮಸಾಬ್ ಖಮ್ರಿಯವರು ಪಠಣದ ಅನುವಾದವನ್ನು ಅರುಹಿದರು.
ರವೂಫ್ ಕೋಬಟ್ಟೆಯವರು ಕಾರ್ಯಕ್ರಮ ನಿರೂಪಿಸಿದರೆ ಎಸ್. ಎಂ. ಆಫ್ತಾಬ್ ಸದಸ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಜನಾಬ್ ಸಾಧಿಕ್ ಪಟೇಲ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಜುಮಾನ್ ಕಾಲೇಜಿಕ ವಿದ್ಯಾರ್ಥಿಯಾದ ಸೈಯದ್ ಇಸ್ಮಾಯಿಲ್ ಫೈಜ್ ರವರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದರು. ಅವರು ತಮ್ಮ ಮನಮೋಹಕ ಕವನಗಳನ್ನು ವಾಚಿಸುವ ಮೂಲಕ ನೆರೆದವರ ಮನಗೆದ್ದರು. ಅವರ ಹಲವು ನವಾಯತಿ ಭಾಷೆಯ ಕವನಗಳು ಸಮುದಾಯದ ಜನಾಂಗ ನಾಗರೀಕತೆಯ ಪ್ರಭಾವದಿಂದ ಒಳಗಾಗುತ್ತಿರುವ ಬದಲಾವಣೆಯನ್ನು ಸೂಚ್ಯವಾಗಿ ತಿಳಿಸುತ್ತಿದ್ದವು.









ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಶ್ರೀಮತಿ ಖದೀಜಾ ಸಲೀಂ ಮತ್ತು ಜನಾಬ್ ನಕೀಬ್ ರವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಖದೀಜಾರವರು ಮಂಗಳೂರು ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಮಾತ್ರವಲ್ಲದೇ ಮುಂಬೈ ವಿಶ್ವವಿದ್ಯಾಲಯದ ಎಲ್.ಎಲ್. ಎಂ ಪದವಿಯನ್ನು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಚಿನ್ನದ ಪದಕವನ್ನೂ ಪಡೆದಿದ್ದಾರೆ. ಪ್ರಸ್ತುತ ಅವರು ಟಾಟಾ ಮೋಟಾರ್ಸ್ ನಲ್ಲಿ ಮ್ಯಾನೇಜರ್ (ನ್ಯಾಯಾಂಗ ವಿಭಾಗ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕಳೆದ ಪಿಯುಸಿ ಕಾಮರ್ಸ್ ಪರೀಕ್ಷೆಯಲ್ಲಿ ೮೭.೩೩ % ಅಂಕಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.
ಇತ್ತೀಚಿನ ನೆರೆಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಗೆ ನೆರವಾಗಲು ರೂ. ಐವತ್ತು ಸಾವಿರ ಸಹಾಯಧನವನ್ನು ಬಿ.ಎಂ.ಜೆ. ವತಿಯಿಂದ ಮಿಲ್ಲತ್ ರಿಲೀಫ್ ಫಂಡ್ ಸಂಸ್ಥೆಗೆ ನೀಡಿರುವುದಾಗಿ ಜನಾಬ್ ರವೂಫ್ ಕೋಬಟ್ಟೆಯವರು ತಿಳಿಸಿದರು.
ಬಳಿಕ ಮಾತನಾಡಿದ ಶ್ರೀಮತಿ ಖದೀಜಾ, ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ಹೆಚ್ಚಿನ ಮಹತ್ವವುಳ್ಳದ್ದಾಗಿದ್ದು ಪ್ರತಿಯೊಂದು ಮಗುವೂ ಸೂಕ್ತ ಶಿಕ್ಷಣ ಪಡೆಯುವಂತಾಗಬೇಕು ಎಂದು ತಮ್ಮ ಆಶಯ ಪ್ರಕಟಿಸಿದರು.
ಸಭಾಕಾರ್ಯಕ್ರಮದ ಬಳಿಕ ಹಲವು ಆಟೋಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಛದ್ಮವೇಷ ಸ್ಪರ್ದೆಯಲ್ಲಿ ತನ್ವೀರ್ ಶಾಬಂದರಿಯವರ ಪುತ್ರಿ ಅರೂಬಾ ಶಾಬಂದರಿ ಪ್ರಥಮ ಸ್ಥಾನ ಪಡೆದಳು. ಸಾಖಿಬ್ ಮುಸ್ಬಾ ರವರ ಪುತ್ರಿ ಸೀಬಾ ಎರಡನೆಯ ಸ್ಥಾನ ಪಡೆದಳು. ಆಟೋಟ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು. ನೌಮಾನ್ ಪಟೇಲ್ ವಿಜೇತರ ಹೆಸರುಗಳನ್ನು ಪ್ರಕಟಿಸಿದರು.
ವೇದಿಕೆಯಲ್ಲಿ ಮನ್ನಾ ಮುರ್ಡೇಶ್ವರ ಜಮಾತ್ ಸಂಘಟನೆಯ ಕಾರ್ಯದರ್ಶಿ ಜಿಯಾವುಲ್ಲಾ ಮನ್ನಾ, ನಿಜಾಮ್ ಸಿದ್ದೀಖಿ, ಡಾ. ಥಿಯಾಬ್ ಜುಕಾಕು, ಅಬ್ದುರ್ ರಹೀಂ ದಾಮೂದಿ, ಅಬ್ದುಲ್ ಮುಯೀದ್, ಎಸ್.ಎಂ. ಆಫ್ತಾಬ್ ಉಪಸ್ಥಿತರಿದ್ದರು.